ಸರ್ಕಾರದಿಂದ ಬೆಳೆ ಪರಿಹಾರಕ್ಕೆ ಒತ್ತಾಯಿಸಿದ ರೈತ ಸಂಘ



ಅಥಣಿ: ತಹಶಿಲ್ದಾರ ಮೂಲಕ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಅವರಿಗೆ ಮನವಿ ಸಲ್ಲಿಸಿದ ರೈತರು ರೈತರ ಬೆಳೆಹಾನಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಅಥಣಿ ತಹಶಿಲ್ದಾರ ದುಂಡಪ್ಪಾ ಕೋಮಾರ ಅವರ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಕೊವಿಡ 19 ಲಾಕ್ ಡೌನ ನಿಂದಾಗಿ ದೇಶಾದ್ಯಂತ ರೈತರು ಬೆಳೆದ ಬೆಳೆ ಮಾರುಕಟ್ಟೆ ದರ ಕುಸಿತ ಮತ್ತು ಸಾಗಾಟ ಮಾಡಲಾಗದೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು ಕಳೆದ ಏಳೆಂಟು ತಿಂಗಳ ಹಿಂದೆ ಬಂದಿದ್ದ ಕೃಷ್ಣಾ ನದಿ ಪ್ರವಾಹ ಮತ್ತು ಈಗಿನ ಕೊರೊನಾ ಸಂಕಷ್ಟ ರೈತರಿಗೆ ನುಂಗಲಾರದ ತುತ್ತಾಗಿದೆ. ಇದರಿಂದಾಗಿ ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಆಗದೆ ಇತ್ತ ಬೆಳೆ ಕಟಾವು ಮಾಡಲು ಕೂಲಿಕಾರರೂ ಸಿಗದೆ ಬೆಳೆದ ಬೆಳೆಗಳು ಜಮೀನಿನಲ್ಲಿ ಕೊಳೆಯುವ ಸ್ಥಿತಿ ನಿರ್ಮಾಣವಾಗಿದ್ದು ಅನ್ನದಾತ ಅಕ್ಷರಶಃ ಅನಾಥನಾಗಿದ್ದಾನೆ. ಅಥಣಿ ತಾಲೂಕಿನಲ್ಲಿ ರೈತರು ಬೆಳೆದ ತರಕಾರಿ ಬೆಳೆಗಳಾದ ಟೊಮೆಟೊ, ಬದನೆ, ಹೀರೇಕಾಯಿ ಮತ್ತು ಇತರೆ ಬೆಳೆಗಳಾದ ಗೋಧಿ, ಮೆಕ್ಕೆಜೋಳ, ಕಡಲೆ, ಹುರುಳಿ ಸೇರಿದಂತೆ ಬಾಳೆ, ದ್ರಾಕ್ಷಿ, ಮಾವು, ದಾಳಿಂಬೆ, ಪಪಾಯಿ, ಪೇರಲ, ಅರಿಸಿಣ ಬೆಳೆದ ರೈತರು ಕೂಡ ತೀವ್ರ ನಷ್ಟ ಅನುಭವಿಸುವಂತಾಗಿದೆ ಇದರಿಂದಾಗುವ ಒಂದು ಕಡೆ ಅತಿವೃಷ್ಟಿ ಇನ್ನೊಂದು ಕಡೆ ಅನಾವೃಷ್ಟಿ ಇಂದಾಗಿ ರೈತರು ತೀವ್ರ ತೊಂದರೆಗೆ ಒಳಗಾಗಿದ್ದು ರೈತ ದೇಶದ ಬೆನ್ನೆಲುಬು ಅನ್ನುವ ಸರ್ಕಾರಗಳು ರೈತರ ಕಣ್ಣೀರು ಒರೆಸಲು ಮುಂದಾಗಬೇಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಪ್ರಕಾಶ ಪೂಜೇರಿ ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪ್ಪನವರ, ಆರ್ ಆರ್ ಬುರ್ಲಿ, ಎಮ್ ವಿ ಬಿರಾದಾರ, ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಪ್ರಕಾಶ ಪೂಜೇರಿ, ಉಪಾಧ್ಯಕ್ಷ ದಶರತ ನಾಯಕ ಪ್ರಧಾನ ಕಾರ್ಯದರ್ಶಿ ರಾಜು ಜಂಬಗಿ,ಕಾರ್ಯದರ್ಶಿ ರಾಜು ಪೂಜಾರಿ ಮತ್ತು ರೈತ ಮುಖಂಡರಾದ ಬಾಬು ಜತ್ತಿ,ಅಣ್ಣಪ್ಪ ಉದ್ದನಗೋಳ,ಗೌಡಪ್ಪ ರಾಮತೀರ್ಥ,ಸೋಮನಿಂಗ ಗುಡ್ಡಾಪೂರ, ಮತ್ತು ವಿಠ್ಠಲ ಸಿರಿಗಿರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು
Share
WhatsApp
Follow by Email