ಕೊರೊನಾ ವೈರಸ್ : ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳುವುದು ಅತಿ ಅವಶ್ಯ : ಸಂಸದ ಅಣ್ಣಾಸಾಹೇಬ್ ಜೊಲ್ಲೆ

ರಾಯಬಾಗ: ಮನೆಯಲ್ಲಿಯೇ ಇದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆನ್ನುವದೇ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡುತ್ತಿರುವ ಆದೇಶ ಮತ್ತು ಕಳಕಳಿಯ ಮನವಿಯಾಗಿದೆ. ಇದನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತಂದು ಕೊರೊನಾ ಮಹಾಮಾರಿಯಿಂದ ನಮ್ಮ ಪ್ರಾಣ ರಕ್ಷಿಸಿಕೊಳ್ಳುವದರ ಜೊತೆಗೆ ಇತರರ ಜೀವವನ್ನು ಉಳಿಸೋಣವೆಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಲೂಕಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಕೇವಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಷ್ಟೇ ಕೊರೊನಾ ವೈರಸ್ಸ ತಡೆಯುವದು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳುವದು ಅತೀ ಅವಶ್ಯಕವಾಗಿದೆ. ಅಷ್ಟೇ ಅಲ್ಲ ಇದು ಸಮಾಜದ ಪ್ರತಿ ವ್ಯಕ್ತಿಯ ಜವಾಬ್ದಾರಿಯುತ ಕರ್ತವ್ಯವಾಗಿದೆ. ಭಯಾನಕವಾದ ಇಂಥ ಸಂದಿಗ್ಧ ಪರಿಸ್ಥಿಯಲ್ಲಿ ನಮ್ಮ ಜೀವವನ್ನು ನಾವು ಕಾಪಾಡಿಕೊಳ್ಳಲು ಸರಕಾರ 144 ಕಲಂ ಜಾರಿಗೆ ತರುವಂತಾಗಿದೆ. ಅದನ್ನಾದರೂ ಕಟ್ಟುನಿಟ್ಟಾಗಿ ಪಾಲಿಸುವ ಹೊಣೆಗಾರಿಕೆ ಪ್ರತಿಯೊಬ್ಬರದಾದರೆ ಕೊರೊನಾ ತಡೆಗಟ್ಟಿ ರೋಗ ಮುಕ್ತ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದರು.
ಮಹಾರಾಷ್ಟçದ ಜನರು ಮುಖ್ಯ ರಸ್ತೆಗಳ ಮುಖಾಂತರ ಬರದೇ ಗಡಿಭಾಗದ ಒಳದಾರಿಗಳಿಂದ ಬರುತ್ತಿದ್ದು, ಅವರನ್ನು ತಡೆಯಲು ಪೋಲೀಸ ಅಧಿಕಾರಿಗಳೊಂದಿಗೆ ಚರ್ಚಿಸುವದಾಗಿ ತಿಳಿಸಿದ ಅವರು ಕೊರೊನಾ ತಡೆಗೆ ಹಣದ ಅವಶ್ಯಕತೆ ಬಿದ್ದಲ್ಲಿ ಸಂಸದರ ನಿಧಿಯಿಂದ ತಾವು ಕೊಡುವದಾಗಿ ಸಂಸದ ಜೊಲ್ಲೆ ಹೇಳಿದರು.
ಶಾಸಕ ಡಿ.ಎಮ್.ಐಹೊಳೆ ಮಾತನಾಡಿ ರೈತರು ತಾವು ಬೆಳೆದ ತರಕಾರಿ, ಹಣ್ಣುಗಳನ್ನು ಬೇರೆ ಕಡೆಗೆ ಮಾರಾಟ ಮಾಡಲು ಪೋಲೀಸ ಇಲಾಖೆಯ ಪರವಾನಿಗೆ ಪಾಸ್ ಪಡೆಯಬೇಕು. ತರಕಾರಿ ಕೊಳ್ಳುವಾಗ ಮುಗಿಬಿದ್ದು ಗದ್ದಲ ಮಾಡದೇ ಒಬ್ಬರಿಂದ ಒಬ್ಬರಿಗೆ 6 ಅಡಿ ಅಂತರ ಕಾಯ್ದುಕೊಂಡು ವ್ಯವಹರಿಸಬೇಕು. ಯಾವದೇ ವಸ್ತು ಮತ್ತೆ ಸಿಗುತ್ತದೆ. ಆದರೆ ಅಮೂಲ್ಯವಾದ ಜೀವ ಒಮ್ಮೆ ಹೋದರೆ ಮತ್ತೆ ಸಿಗುವದಿಲ್ಲವೆನ್ನುವ ಸತ್ಯವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕೆಂದು ಶಾಸಕರು ಜನತೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು.
ತಹಶೀಲ್ದಾರ ಚಂದ್ರಕಾoತ ಭಜಂತ್ರಿ ಮಾತನಾಡಿ ಕೊರೊನಾ ತಡೆಗಟ್ಟಲು ಸರಕಾರದ ನಿರ್ದೇಶನ, ಆದೇಶ ಪಾಲಿಸುವದು ನಮ್ಮ ಕರ್ತವ್ಯವಾಗಿದೆ ಕಾರಣ ಅಧಿಕಾರಿಗಳು ತಮ್ಮ ನಿಗದಿತ ಕರ್ತವ್ಯಗಳನ್ನು ಚಾಚೂ ತಪ್ಪದೇ ನಿರ್ವಹಿಸಬೇಕು. ಈಗ ತಾಲೂಕಿನಾದ್ಯಂತ ಕೈಕೊಂಡ ಕಾರ್ಯಗಳ ಮತ್ತು ಅವುಗಳ ನಿರ್ವಹಣೆ ಬಗ್ಗೆ ವಿವರಿಸಿದರು.
ಯಾವದೇ ಕೆಲಸ ಕಾರ್ಯಗಳಿಲ್ಲದೇ ಕೆಲವರು ಅನಾವಶ್ಯಕವಾಗಿ ಸುತ್ತಾಡುವ 30 ಜನರ ಮೇಲೆ ಪ್ರಕರಣ ದಾಖಲಿಸಿ ವಾಹನ ಜಪ್ತ ಮಾಡಲಾಗಿದೆ. ಕಾರಣ ಅನಾವಶ್ಯಕವಾಗಿ ಯಾರೂ ಮನೆಯಿಂದ ಹೊರ ಬರಬಾರದೆಂದು ಸಿಪಿಐ ಕೆ.ಎಸ್.ಹಟ್ಟಿ ಹೇಳಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ರವಿ ಕರನಿಂಗನವರ, ತಾ.ಪಂ.ಇಒ ಪ್ರಕಾಶ ವಡ್ಡರ, ತಾಲೂಕಾ ವೈದ್ಯಾಧಿಕಾರಿ ಡಾ.ಎಸ್.ಎಸ್..ಬಾನೆ ಮಾತನಾಡಿದರು.
ಸಭೆಯಲ್ಲಿ ಎಲ್ಲ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.
Share
WhatsApp
Follow by Email